ಬೆಂಗಳೂರು, ಜನವರಿ 29:ವೀರ ಮರಣವನ್ನಪ್ಪಿದ ಯೋಧರ ಕುಟುಂಬಗಳಿಗೆ ಸಾರಿಗೆ ಸಂಸ್ಥೆಯ ಉಚಿತ ಬಸ್ ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈಗಾಗಲೇ ಮರಣ ಹೊಂದಿದ ಹಾಗೂ ನಿವೃತ್ತ ಯೋಧರಿಗೆ ಉದ್ಯೋಗದಲ್ಲಿ ಮೀಸಲು ಕಲ್ಪಿಸಲಾಗಿದೆ.ಈಗ ಮೃತಪಟ್ಟ ಯೋಧರ ತಂದೆ, ತಾಯಿ ಇಲ್ಲವೆ ಪತ್ನಿಗೆ ಪಾಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ವಾಹನಗಳ ನೋಂದಣಿ ಸಂದರ್ಭದಲ್ಲಿ ಫ್ಯಾನ್ಸಿ ಸಂಖ್ಯೆ ಪಡೆಯಲು ವಿಧಿಸುತ್ತಿದ್ದ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
ಫ್ಯಾನ್ಸಿ ಸಂಖ್ಯೆಗಳಿಗೆ ಅಧಿಕ ಬೇಡಿಕೆ ಇರುವುದನ್ನು ಮನಗಂಡು ಪರಿಷ್ಕರಿಸಿದ್ದು, ಪ್ರಸಕ್ತ ಸಾಲಿನ ಚಾಲ್ತಿಯಲ್ಲಿರುವ ಶ್ರೇಣಿಯ ಅದೃಷ್ಟ ಅಂಕೆಗಳಿಗೆ ದ್ವಿಚಕ್ರ ವಾಹನಗಳ ಶುಲ್ಕ ಮೂರರಿಂದ ಆರು ಸಾವಿರಕ್ಕೆ ಹೆಚ್ಚಿದೆ. ಮುಂದಿನ ಶ್ರೇಣಿಯ ಅಂಕೆಗಳು ಬೇಕಾದಲ್ಲಿ ೨೫ ಸಾವಿರ ರುಪಾಯಿ ತೆರಬೇಕು.
ಕಾರು ಮತ್ತಿತರ ಲಘು ವಾಹನಗಳಿಗೆ ಆರರಿಂದ ಇಪ್ಪತ್ತು ಸಾವಿರ ರು., ಮುಂದಿನ ಶ್ರೇಣಿ ಅಂಕೆಗಳಿಗೆ ೨೫-೭೫ ಸಾವಿರ ರು.ಶುಲ್ಕ ನೀಡಬೇಕು.ಇತರೆ ವಾಹನಗಳಿಗೆ ೯-೩೦ ಸಾವಿರ ರು.ಗೆ ಹೆಚ್ಚಸಿದ್ದು, ಮುಂದಿನ ಶ್ರೇಣಿಗೆ ೭೫ ಸಾವಿರ ಶುಲ್ಕ ವಿಧಿಸಲಾಗಿದೆ.ಇದರಿಂದ ಇಲಾಖೆಗೆ ವಾರ್ಷಿಕ ೧೦ ಕೋಟಿ ರು ಆದಾಯವಿತ್ತು. ಪರಿಷ್ಕರಣೆಯಿಂದ ೩೦ ಕೋಟಿ ರು.ಗೆ ಏರಿಕೆಯಾಗಲಿದೆ.
ಸಾರಿಗೆ ಸಂಸ್ಥೆ ಆದಾಯ ಹೆಚ್ಚಳ ಹಾಗೂ ಸಂಪನ್ಮೂಲ ಕ್ರೌಢೀಕರಿಸಲು ಬಸ್ಗಳಲ್ಲಿ ಭಾರೀ ಪ್ರಮಾಣದ ಜಾಹಿರಾತು ಹಾಗೂ ಕೊರಿಯರ್ ಸೇವೆ ಆರಂಭಿಸಲಾಗುವುದು.
ಬಹುಮಹಡಿ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರದ ಮೂಲಕ ಶಾಶ್ವತ ಆದಾಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.